ಬಸವಕಲ್ಯಾಣದ ಬಿಕೆಆರ್ಡಿಬಿ ಪ್ರವಾಸಿ ಮಂದಿರ ದಲ್ಲಿ ಎಐಸಿಸಿ ಸದಸ್ಯ ಆನಂದ ದೇವಪ್ಪ ಮೇಲೆ ನಡೆದ ಹಲ್ಲೆಗೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಪುತ್ರ, ವಿಧಾನಪರಿಷತ್ ಮಾಜಿ ಸದಸ್ಯ ವಿಜಯಸಿಂಗ್ ಸೇರಿ 10 ಜನರ ವಿರುದ್ಧ ಅಲ್ಲಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯಸಿಂಗ್ ರಜಪೂತ, ಬಸವಕಲ್ಯಾಣ ತಾಲ್ಲೂಕಿನ ಜನಾಪುರದ ಓಂ ಪಾಟೀಲ, ಅಮ್ಜದ್ ನವರಂಗ್, ಬಸವಕಲ್ಯಾಣದ ಮೀನಾಜ್, ರಾಮ್ ಜಾಧವ್, ಬೀದರ್ನ ಈರಣ್ಣ ಬಾವಗೆ, ಟಿಪ್ಪು, ಮೊಹಸಿನ್, ಮಂಠಾಳದ ದಾವೂದ್, ಗೋರಟಾದ ಜೈದೀಪ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ' ಎಂದು ಆನಂದ ದೇವಪ್ಪ ಗುರುವಾರ ತಡರಾತ್ರಿ ದೂರು ದಾಖಲಿಸಿದ್ದಾರೆ.
'ವಿಧಾನ ಪರಿಷತ್ ಸದಸ್ಯರಾದ ಪ್ರಕಾಶ ರಾಠೋಡ, ಭೀಮರಾವ್ ಪಾಟೀಲ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಬಿಕೆಆರ್ಡಿಬಿ
ಪ್ರವಾಸಿಮಂದಿರದಲ್ಲಿ ಸಭೆ ನಡೆಯುತ್ತಿದ್ದಾಗ ವಿಜಯಸಿಂಗ್ ಅವರು ಕಾರ್ಯಕ್ರಮಕ್ಕೆ ತಗಲುವ ವೆಚ್ಚದ ಮಾಹಿತಿ ನೀಡಬೇಕು ಎಂದು ಸೂಚಿಸಿದರು. ಅದಕ್ಕೆ ನಾನು 'ನಿಮಗೇಕೆ ಲೆಕ್ಕ ಕೊಡಬೇಕು. ಪಕ್ಷದ ಮುಖಂಡರಿಗೆ ಮಾಹಿತಿ ಕೊಡುತ್ತೇನೆ' ಎಂದು ಹೇಳಿದಾಗ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಆಗ ವಿಜಯಸಿಂಗ್ ಅವರು ಹೊರಗಡೆ ನಿಂತಿದ್ದ ತಮ್ಮ ಬೆಂಬಲಿಗರನ್ನು ಕರೆದರು. ಅಲ್ಲದೇ ವಿಜಯಸಿಂಗ್ ಸೇರಿ 10 ಜನ ನನ್ನ ತುಟಿ, ಎದೆ ಹಾಗೂ ಬೆನ್ನಿಗೆ ಬಲವಾಗಿ ಹೊಡೆದಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು' ಎಂದು ಆನಂದ ದೇವಪ್ಪ ದೂರಿನಲ್ಲಿ ವಿವರಿಸಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಳ್ಳುತ್ತಿದ್ದಂತೆಯೇ ವಿಜಯಸಿಂಗ್ ಅವರು, ನಿರೀಕ್ಷಣಾ ಜಾಮೀನು
ಪಡೆದುಕೊಂಡಿದ್ದಾರೆ.
Tags
BIDAR